ಸುಳ್ಯದಲ್ಲಿ ರಾಜ್ಯ ಮಟ್ಟದ 10 ದಿನಗಳ ಯಕ್ಷಗಾನ ಕಲಾ ಕಾರ್ಯಾಗಾರ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಸೆಪ್ಟೆ೦ಬರ್ 21 , 2013
|
ಯಕ್ಷಗಾನದಲ್ಲಿ ಮುಖ್ಯವಾಗಿ ಮಹಾಭಾರತದ ಭಾಗ ಒಂದು ಪರ್ವ ಇದ್ದಂತೆ. ಯಕ್ಷಗಾನದಲ್ಲಿ ಅಳವಡಿಸಲಾದ ಪ್ರಸಂಗ, ಪಾತ್ರ, ನಿರ್ವಹಣೆ ಕುರಿತಂತೆ ಹಳೆಗನ್ನಡ ಸಾಹಿತ್ಯ ಮತ್ತು ಕಲೆ ಬಗ್ಗೆ ರಾಜ್ಯ ಮಟ್ಟದ ಕಾರ್ಯಾಗಾರಕ್ಕೆ ಸುಳ್ಯದಲ್ಲಿ ವೇದಿಕೆ ಸಿದ್ಧವಾಗಿದೆ.
ರಾಜ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಾಯೋಜಕತ್ವದಲ್ಲಿ, ಇಲ್ಲಿನ ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆ ಸಂಯೋಜನೆಯಲ್ಲಿ ಈ ಕಾರ್ಯಾಗಾರ ಅ. 17ರಿಂದ 27ರವೆರೆಗೆ ಸುಳ್ಯ ಸ್ನೇಹ ಶಿಕ್ಷಣ ಸಂಸ್ಥೆಯ ಬಯಲು ರಂಗ ಮಂದಿರದಲ್ಲಿ ನಡೆಯಲಿದೆ. ಹಳೆಗನ್ನಡ ಸಾಹಿತ್ಯ, ಯಕ್ಷಗಾನ ಪ್ರಸಂಗಗಳು ಮತ್ತು ಯಕ್ಷಗಾನ ರಂಗಭಾಷೆ ಕುರಿತಂತೆ ಯಕ್ಷಗಾನ ಪರಂಪರೆಯ ಕೊಂಡಿ ಎನಿಸಿರುವ ಬಲಿಪ ನಾರಾಯಣ ಭಾಗವತ ಅವರ ನಿರ್ದೇಶನದಲ್ಲಿ ನಡೆಯಲಿದೆ.
ಆರಂಭದ ದಿನ ಬಾಲಗೋಪಾಲರ ನೃತ್ಯ, ಮುಖ್ಯ ಸ್ತ್ರೀ ವೇಷ ನೃತ್ಯ, ಪಾಂಡವರ ಒಡ್ಡೋಲಗ, ಕೃಷ್ಣನ ಒಡ್ಡೋಲಗ, ಹನುಮಂತನ ತೆರೆಪರಪ್ಪಾಟು, ಬಣ್ಣದ ವೇಷದ ತೆರೆಪರಪ್ಪಾಟು, ಹೆಣ್ಣು ಬಣ್ಣದ ತೆರೆಪರಪ್ಪಾಟು ಪ್ರದರ್ಶನ ನಡೆಯಲಿದೆ. ನಂತರದ ಪ್ರತಿ ದಿನ ಮಧ್ಯಾಹ್ನ 2ರಿಂದ 5 ಗಂಟೆಯವರೆಗೆ ಹಾಗೂ 6ರಿಂದ 9 ಗಂಟೆಯವರೆಗೆ ಕಾಲ ಮಿತಿಯ ಎರಡು ಪ್ರಸಂಗಗಳು ಪ್ರದರ್ಶನ ನಡೆಯಲಿದೆ. ಈ ಮಧ್ಯದಲ್ಲಿ ಒಂದು ಗಂಟೆ ಹಳೆಗನ್ನಡ ಕಾವ್ಯ ಮತ್ತು ಯಕ್ಷಗಾನದ ಪ್ರಸಂಗ ಆಧರಿಸಿ ಮಹಾಭಾರತದ ಪ್ರಮುಖ ಪಾತ್ರಗಳ ಕುರಿತಾಗಿ ಕನ್ನಡ ಸಾಹಿತ್ಯದ ಹಾಗೂ ಯಕ್ಷರಂಗದ ವಿದ್ವಾಂಸರಿಂದ ಉಪನ್ಯಾಸ.
|
ಡಾ. ಚಂದ್ರ ಶೇಖರ ದಾಮ್ಲೆ, ಕಾರ್ಯಕ್ರಮ ಸಂಯೋಜಕ
|
ನಡೆಯಲಿರುವ ಪ್ರದರ್ಶನ: ಭೀಷ್ಮೋತ್ಪತ್ತಿ, ಭೀಷ್ಮ ಪ್ರತಿಜ್ಞೆ, ಭೀಷ್ಮ ವಿಜಯ, ಪರೀಕ್ಷ ರಂಗಾ, ದ್ರುಪದ ಗರ್ವಭಂಗ, ಅರಗಿನಾಲಯ ಹಿಡಿಂಬಾ ವಿವಾಹ, ಬಕಾಸುರ ವಧೆ, ದ್ರೌಪದಿ ಸ್ವಯಂವರ, ಗಜಮೋಹಿನಿ ಐರಾವತ, ಸುಭದ್ರಾ ಕಲ್ಯಾಣ, ರಾಜಸೂಯ ಮಾಗಧ ವಧೆ, ಶಿಶುಪಾಲ ವಧೆ, ಕಪಟ ದ್ಯೂತ, ದ್ರೌಪದಿ ಅಕ್ಷಯಾಂಬರ, ಇಂದ್ರ ಕೀಲಕ, ಊರ್ವಶೀ ಶಾಪ, ನಿವಾತಕವಚರ ವಧೆ, ಸೌಗಂಧಿಕಾಪಹರಣ ಜಟಾಸುರ, ರುದ್ರಭೀಮ, ಕೀಚಕವಧೆ, ಉತ್ತರ ಗೋಗ್ರಹಣ, ಕೃಷ್ಣ ಸಂಧಾನ, ಭೀಷ್ಮ ಪರ್ವ, ದ್ರೋಣ ಪರ್ವ, ಚಕ್ರವ್ಯೆಹ ಸೆಂಧವ ವಧೆ, ದುಶ್ಯಾಸನ, ಕರ್ಣಪರ್ವ, ಶಲ್ಯಪರ್ವ, ಗದಾಯುದ್ದ, ಅಶ್ವತ್ಥಾಮ ರಕ್ತರಾತ್ರಿ, ಸ್ವರ್ಗಾರೋಹಣ ಪರ್ವ ಮುಂತಾದ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ.
ಪಾತ್ರದ ಉಪನ್ಯಾಸ: ಮಹಾಭಾರತದ ಪಾತ್ರಗಳ ಬಗ್ಗೆ ಯಕ್ಷಗಾನ ಕಲೆ ಮತ್ತು ಸಾಹಿತ್ಯದ ಬಗ್ಗೆ ಸಾಧನೆ ಮಾಡಿದ ವಿದ್ವಾಂಸರಿಂದ ಪಾತ್ರ ಪರಿಚಯ, ಔಚಿತ್ಯ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಭೀಷ್ಮನ ಬಗ್ಗೆ ಡಾ. ಎಂ. ಪ್ರಭಾಕರ ಜೋಷಿ, ದ್ರೋಣನ ಬಗ್ಗೆ ಡಾ. ಶ್ರೀಧರ್ ಡಿ.ಎಸ್. ಕಿನ್ನಿಗೋಳಿ, ಧರ್ಮರಾಯ ಡಾ. ರಾಧಾಕೃಷ್ಣ ಪೆರ್ಲ, ದುರ್ಯೋಧನ ಬಗ್ಗೆ ಡಾ. ಕಬ್ಬಿನಾಲೆ ವಸಂತ್ ಭಾರದ್ವಾಜ್, ಅರ್ಜುನನ ಬಗ್ಗೆ ಡಾ. ಗಣರಾಜ ಕುಂಬ್ಳೆ, ದ್ರೌಪದಿ ಬಗ್ಗೆ ಶ್ರೀ ಕೋಳ್ಯೂರು ರಾಮಚಂದ್ರ ರಾವ್, ಕೃಷ್ಣನ ಬಗ್ಗೆ ಲಕ್ಷ್ಮೀಶ ತೋಳ್ಪಾಡಿ, ಕರ್ಣನ ಬಗ್ಗೆ ಜಬ್ಬರ್ ಸಮೋ, ಭೀಮ ಬಗ್ಗೆ ಪ್ರೊ. ಮಲ್ಪೆ ಲಕ್ಷ್ಮಿನಾರಾಯಣ ಸಾಮಗ ಅವರಿಂದ ಉಪನ್ಯಾಸ ನಡೆಯಲಿದೆ.
ಗೌರವ ಧನ: ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲ ಕಲಾವಿದರಿಗೆ ಪ್ರಾಧಿಕಾರದ ವತಿಯಿಂದ ಗೌರವ ಸಂಭಾವನೆ ನೀಡಲಾಗುತ್ತದೆ. ಅಲ್ಲದೆ ಉತ್ತಮ ಆತಿಥ್ಯ ಇದೆ. ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಸಂಘಟನಾ ಸಮಿತಿ: ಈ ಕಾರ್ಯಾಗಾರವನ್ನು ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆ ಸಂಘಟಿಸಿದೆ. ಇದರ ಅಧ್ಯಕ್ಷ ಡಾ. ಚಂದ್ರಶೇಖರ್ ದಾಮ್ಲೆ, ಶಾಸಕ ಎಸ್. ಅಂಗಾರ, ಭಕ್ತವತ್ಸಲ ಭಟ್ ನೀರಬಿದಿರೆ, ಆನೆಕಾರ್ ಗಣಪಯ್ಯ, ಪಾತನಡ್ಕ ಶ್ಯಾಮ್ ಭಟ್ ಜಗಮೋಹನ್ ರೈ ಮೊದಲಾದವರು ಸಂಘಟನಾ ಸಮಿತಿಯಲ್ಲಿದ್ದಾರೆ.
"ಇದೊಂದು ರಾಜ್ಯ ಮಟ್ಟದ ಮತ್ತು ಈವರಗೆ ರಾಜ್ಯದಲ್ಲಿ ಎಲ್ಲಿಯೂ ನಡೆಯದ ವಿನೂತನ ಪ್ರಯೋಗದ ಕಾರ್ಯಾಗಾರ. ಅಲ್ಲದೆ ಯಕ್ಷ ಇತಿಹಾಸದಲ್ಲೇ 10 ದಿನಗಳ ನಿರಂತರ ಒಂದೇ ವೇದಿಕೆಯಲ್ಲಿ ಯಾವುದೇ ಕಾರ್ಯಕ್ರಮ ನಡೆದದ್ದು ನನ್ನ ಗಮನಕ್ಕೆ ಬಂದಿದ್ದಿಲ್ಲ. ಈ ಕಾರ್ಯಾಗಾರವನ್ನು ಬಲಿಪ ನಾರಾಯಣ ಭಾಗವತರ ನಿರ್ದೇಶನದಲ್ಲಿ ಮಾಡಲಾಗುತ್ತದೆ." - ಡಾ. ಚಂದ್ರ ಶೇಖರ ದಾಮ್ಲೆ, ಕಾರ್ಯಕ್ರಮ ಸಂಯೋಜಕ
ಕಾರ್ಯಾಗಾರದಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು ಡಾ.ಚಂದ್ರಶೇಖರ ದಾಮ್ಲೆ (9945506045) ಇವರನ್ನು ಸಂಪರ್ಕಿಸಬಹುದು.
ಕೃಪೆ : http://vijaykarnataka.indiatimes.com
|
|
|